unfoldingWord 31 - ಯೇಸು ನೀರಿನ ಮೇಲೆ ನಡೆದದ್ದು
Esquema: Matthew 14:22-33; Mark 6:45-52; John 6:16-21
Número de guión: 1231
Lingua: Kannada
Público: General
Finalidade: Evangelism; Teaching
Features: Bible Stories; Paraphrase Scripture
Estado: Approved
Os guións son pautas básicas para a tradución e a gravación noutros idiomas. Deben adaptarse segundo sexa necesario para facelos comprensibles e relevantes para cada cultura e lingua diferentes. Algúns termos e conceptos utilizados poden necesitar máis explicación ou mesmo substituírse ou omitirse por completo.
Texto de guión
ಯೇಸು ಐದು ಸಾವಿರ ಜನರಿಗೆ ಊಟವನ್ನು ಕೊಟ್ಟ ನಂತರ, ಆತನು ಶಿಷ್ಯರಿಗೆ ದೋಣಿಯನ್ನು ಹತ್ತಲು ಹೇಳಿದನು. ಸರೋವರದ ಆಚೇ ಕಡೆಗೆ ದೋಣಿಯಲ್ಲಿ ಹೋಗಲು ಅವರಿಗೆ ಹೇಳಿ, ಆತನು ಸ್ವಲ್ಪ ಸಮಯದವರೆಗೆ ಅಲ್ಲಿಯೇ ಇದ್ದನು. ಆದ್ದರಿಂದ ಶಿಷ್ಯರು ಹೊರಟುಹೋದರು, ಮತ್ತು ಯೇಸು ಜನರನ್ನು ಅವರ ಮನೆಗಳಿಗೆ ಕಳುಹಿಸಿದನು. ಅದಾದ ನಂತರ ಯೇಸು ಪ್ರಾರ್ಥನೆ ಮಾಡಲು ಬೆಟ್ಟದ ಮಗ್ಗಲಲ್ಲಿ ಹೋದನು. ಆತನು ಒಬ್ಬನೇ ಅಲ್ಲಿ ಇದ್ದು ತಡರಾತ್ರಿಯವರೆಗೂ ಪ್ರಾರ್ಥಿಸಿದನು.
ಈ ಸಮಯದಲ್ಲಿ ಶಿಷ್ಯರು ತಮ್ಮ ದೋಣಿಯನ್ನು ಹುಟ್ಟುಹಾಕಿಕೊಂಡು ಹೋಗುತ್ತಿದ್ದರು, ಆದರೆ ಗಾಳಿಯು ಅವರಿಗೆ ವಿರುದ್ಧವಾಗಿ ಬಲವಾಗಿ ಬೀಸುತ್ತಿತ್ತು. ತಡರಾತ್ರಿಯಾದಾಗ, ಅವರು ಸರೋವರದ ಮಧ್ಯದವರೆಗೆ ಮಾತ್ರ ತಲುಪಿದ್ದರು.
ಆ ಸಮಯದಲ್ಲಿ ಯೇಸು ಪ್ರಾರ್ಥಿಸುವುದನ್ನು ಮುಗಿಸಿ ತನ್ನ ಶಿಷ್ಯರನ್ನು ಎದುರುಗೊಳ್ಳಲು ಅವರ ಕಡೆಗೆ ಹೋಗಲು ಪ್ರಾರಂಭಿಸಿದನು. ಆತನು ನೀರಿನ ಮೇಲೆ ನಡೆಡುಕೊಂಡು ಅವರ ದೋಣಿಯ ಕಡೆಗೆ ಹೋದನು.
ಆಗ ಶಿಷ್ಯರು ಆತನನ್ನು ನೋಡಿದರು. ಅವರು ಆತನನ್ನು ಭೂತ ಎಂದು ಭಾವಿಸಿದ್ದರಿಂದ ಅವರು ಬಹಳ ಭಯಪಟ್ಟರು. ಅವರು ಭಯಪಟ್ಟಿದ್ದಾರೆಂದು ಯೇಸುವಿಗೆ ತಿಳಿದಿತ್ತು, ಆದ್ದರಿಂದ ಆತನು ಅವರೊಂದಿಗೆ ಮಾತನಾಡಿ, "ಭಯಪಡಬೇಡಿರಿ ನಾನೇ!" ಎಂದು ಹೇಳಿದನು.
ಆಗ ಪೇತ್ರನು ಯೇಸುವಿಗೆ, "ಕರ್ತನೇ ನೀನೇ ಆದರೆ ನಾನು ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವುದಕ್ಕೆ ಅಪ್ಪಣೆ ಕೊಡು" ಎಂದನು. ಯೇಸು ಪೇತ್ರನಿಗೆ "ಬಾ!" ಅಂದನು.
ಆದ್ದರಿಂದ ಪೇತ್ರನು ಯೇಸುವಿನ ಬಳಿಗೆ ಹೋಗುವುದಕ್ಕೆ ದೋಣಿಯಿಂದ ಇಳಿದು ನೀರಿನ ಮೇಲೆ ನಡೆಯಲು ಪ್ರಾರಂಭಿಸಿದನು. ಆದರೆ ಸ್ವಲ್ಪ ದೂರದ ನಡೆದುಹೋದ ನಂತರ, ಅವನು ಯೇಸುವನ್ನು ನೋಡುವುದನ್ನು ಬಿಟ್ಟು ಅಲೆಗಳ ಕಡೆಗೆ ನೋಡಲು ಮತ್ತು ಬಲವಾದ ಗಾಳಿಯನ್ನು ಅನುಭವಿಸಲು ಪ್ರಾರಂಭಿಸಿದನು.
ಆಗ ಪೇತ್ರನು ಭಯಪಟ್ಟು ನೀರಿನಲ್ಲಿ ಮುಳುಗಲಾರಂಭಿಸಿದನು. ಅವನು, “ಕರ್ತನೇ, ನನ್ನನ್ನು ಕಾಪಾಡು” ಎಂದು ಕೂಗಿದನು. ತಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದುಕೊಂಡನು. ಆಗ ಆತನು ಪೇತ್ರನಿಗೆ, "ನೀನು ಅಲ್ಪ ವಿಶ್ವಾಸಿ, ನಾನು ನಿನ್ನನ್ನು ಕಾಪಾಡುವಂತೆ ನೀನು ಯಾಕೆ ನನ್ನನ್ನು ನಂಬಲಿಲ್ಲ?" ಎಂದನು.
ಆಗ ಪೇತ್ರನೂ ಯೇಸುವೂ ದೋಣಿಯನ್ನು ಹತ್ತಿದ್ದರು, ಕೂಡಲೇ ಗಾಳಿ ಬೀಸುವುದು ನಿಂತು ಹೋಯಿತು. ನೀರು ಶಾಂತವಾಯಿತು. ಶಿಷ್ಯರು ಆತ್ಯಾಶ್ಚರ್ಯಪಟ್ಟು ಯೇಸುವಿಗೆ ಅಡ್ಡಬಿದ್ದರು. ಅವರು ಆತನನ್ನು ಆರಾಧಿಸಿ ಆತನಿಗೆ, "ನಿಜವಾಗಿ ನೀನು ದೇವಕುಮಾರನು" ಎಂದು ಹೇಳಿದರು.